Responsive Menu
Add more content here...
ಬಾಲ್ಯ ಮತ್ತು ಶಿಕ್ಷಣ

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ, ಬಂಟ್ವಾಳ ತಾಲೂಕಿನ ಕರ್ನಾಟಕ ಮತ್ತು ಕೇರಳ ಭೂಭಾಗದ ಗಡಿ ಪ್ರದೇಶವಾದ ಕರೋಪಾಡಿ ಗ್ರಾಮ ಕೋಡ್ಲ ಎಂಬಲ್ಲಿನ ನಿವಾಸಿಗಳಾಗಿದ್ದ ಶ್ರೀಯುತ ಪಿ. ನಾರಾಯಣ ಭಟ್ಟ ಹಾಗು ಶ್ರೀಮತಿ ರಾಧಮ್ಮ ದಂಪತಿಗಳ ಸುಪುತ್ರನಾಗಿ ದಿನಾಂಕ 09.11.1932 ಜನನ. ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ಅಕಾಲಿಕ ಮಾತೃ ವಿಯೋಗದಿಂದಾಗಿ, ತನ್ನ ಚಿಕ್ಕಮ್ಮ (ತಾಯಿಯ ತಂಗಿ) ಶ್ರೀಮತಿ ಪಾರ್ವತಿಯವರ ಮಮತೆಯ ಆರೈಕೆಯಲ್ಲಿ ಮತ್ತು ಅಜ್ಜ ,ಅಜ್ಜಿ ಯರಾದ (ತಾಯಿಯ ತಂದೆ – ತಾಯಿ) ಮುಗುಳಿ ಮಹಾಬಲ ಭಟ್ಟರು ಹಾಗು ಅಕ್ಕಣಿಯಮ್ಮ ರವರ ಕುಟುಂಬದಲ್ಲಿ ಬೆಳೆದರು. ಬಾಲ್ಯದ ಜೀವನ ಮತ್ತು ಶಿಕ್ಷಣವನ್ನು ಇದೇ ಪರಿಸರದಲ್ಲಿ ಕಳೆದ ಇವರು, ತನ್ನ ಅಣ್ಣ ಮುಕುಂದ ರಾಯರು ಅಧ್ಯಾಪನ ವೃತ್ತಿಯ ಸಲುವಾಗಿ ಕೋಳ್ಯೂರುನಲ್ಲಿಯೇ ವಾಸ್ತವ್ಯ ಮಾಡಬೇಕಾದ ಅನಿವಾರ್ಯತೆ ಒದಗಿ ಬಂದ ಕಾರಣದಿಂದಾಗಿ ಕುಟುಂಬ ಸಮೇತರಾಗಿ ಕೋಳ್ಯೂರುನಲ್ಲಿ ವಾಸಿಸತೊಡಗಿದರು. ಹಾಗು ಮುಂದೆ ಕೋಳ್ಯೂರು ಎಂದು ನಾಮಾಂಕಿತಗೊಂಡು ಪ್ರಸಿಧ್ಧರಾದರು.

Sri Vani Vijaya Senior Primary School

ಕರೋಪಾಡಿಯ ಪಕ್ಕದ ಮಿತ್ತನಡ್ಕ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ, ನಂತರ ಕೊಡ್ಲಮೊಗರು ಶ್ರೀ ವಾಣೀ ವಿಜಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿವರೆಗಿನ ವಿದ್ಯಾರ್ಜನೆಯನ್ನು ಹೊಂದಿದರು. ಪ್ರಸಿದ್ಧ ಯಕ್ಷಗಾನ ತಾಳಮದ್ದಲೆ ಅರ್ಥಧಾರಿಯಾಗಿದ್ದ ಅಜ್ಜ ಮುಗುಳಿ ಮಹಾಬಲ ಭಟ್ಟರು ಮತ್ತು ನಾಟೀ ವೈದ್ಯೆಯವರೂ ಆಗಿದ್ದ ಅಜ್ಜಿ ಅಕ್ಕಣಿಯಮ್ಮ ರವರ ದಿನಚರಿಯ ಪ್ರಭಾವದಿಂದಾಗಿ ಶಾಲಾ ವಿದ್ಯಾರ್ಜನೆಯ ಜೊತೆ-ಜೊತೆಯಲ್ಲಿ ರಾಮಚಂದ್ರ ರಾಯರು ಕಾವ್ಯವಾಚನ, ಪ್ರವಚನ, ಶ್ಲೋಕಗಳ ಕಂಠಪಾಠ ಹಾಗು ಮಾತುಗಾರಿಕೆಗಳನ್ನು ಹವ್ಯಾಸವನ್ನಾಗಿಸಿ ಸಿದ್ದಿಸಿಕೊಂಡವರಿವರು.

ಆಗಿನ ಕಾಲದಲ್ಲಿ ಅಧ್ಯಾಪಕ ವೃತ್ತಿಗೆ ಅವಕಾಶ ಮತ್ತು ಸಾಮರ್ಥ್ಯ ಹೊಂದಿದ್ದರೂ, ತನ್ನಲ್ಲಿದ್ದ ಕಲಾಪ್ರತಿಭೆ ಹಾಗು ಹಿರಿಯರ ಓಲೈಕೆಯನುಸಾರವಾಗಿ 14ನೇ ವಯಸ್ಸಿನಲ್ಲಿಯೇ ಶ್ರೀಯುತ ಕುರಿಯ ವೆಂಕಟ ಶಾಸ್ತ್ರಿಗಳ ಪುತ್ರರಾದ ಶ್ರೀಯುತ ಕುರಿಯ ವಿಟ್ಠಲ ಶಾಸ್ತ್ರಿಗಳವರ ಸಂಚಾಲಕತ್ವದಲ್ಲಿದ್ದ, ಶ್ರೀಯುತ ಮಂಜಯ್ಯ ಹೆಗ್ಗಡೆಯವರ ಒಡೆತನದ ಶ್ರೀ ಧರ್ಮಸ್ಥಳ ಮೇಳದಲ್ಲಿ ಯಕ್ಷಗಾನ ತರಭೇತಿಯನ್ನು ಪಡೆಯಲು ಆರಂಭಿಸಿ ಪರಿಶ್ರಮದಿಂದ ಯಶಸ್ವಿಯಾದರು.

ವಿಳಾಸ

ಕಲಾಪ್ರಸಾದ, ಅಂಚೆ ಇನ್ನಂಜೆ.
ಶಂಕರಪುರ, ಉಡುಪಿ ತಾಲೂಕು.
ಪಿನ್ ಕೋಡ್ 576122.
ಕರ್ನಾಟಕ ರಾಜ್ಯ. ಭಾರತ.

ಮಿಂಚಿನ ಅ೦ಚೆ

kollyurramachandrarao@gmail.com

ಮೊಬೈಲ್:

+91-8123709799